
ದಸರಾ ಮಹೋತ್ಸವ ಎಂದ ಕೂಡಲೇ ನಮ್ಮ ಕಣ್ಣಿಗೆ ಕಟ್ಟುವ ದೃಶ್ಯ ಮೈಸೂರಿನ ಜಂಬೂಸವಾರಿ. ಆದರೆ, ಕರ್ನಾಟಕದ ಮೂಲೆಮೂಲೆಗಳಲ್ಲಿ ದಸರೆಯನ್ನು ಅತ್ಯಂತ ವಿಶಿಷ್ಟವಾಗಿ ಮತ್ತು ಐತಿಹಾಸಿಕ ಹಿನ್ನೆಲೆಯೊಂದಿಗೆ ಆಚರಿಸುವ ಅನೇಕ ಸ್ಥಳಗಳಿವೆ. ಅಂತಹ ಒಂದು ವಿಶೇಷ ಸ್ಥಳವೆಂದರೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ. ವಿಜಯದಶಮಿಯ ದಿನದಂದು ಶಿಕಾರಿಪುರದ ಆರಾಧ್ಯದೈವ ಹುಚ್ಚರಾಯಸ್ವಾಮಿಯ ಜೊತೆಗೆ, ಪಟ್ಟಣದ ಇತರ ದೇವಾಲಯಗಳ ಉತ್ಸವಮೂರ್ತಿಗಳನ್ನು ಬೇಗೂರು ಮರಡಿತಾಂಡಾದಲ್ಲಿರುವ ಗಾಳಿ ಆಂಜನೇಯ ದೇವಸ್ಥಾನದ ಮುಂಭಾಗದ ಬನ್ನಿಮಂಟಪಕ್ಕೆ ಭವ್ಯ ಮೆರವಣಿಗೆಯಲ್ಲಿ ತರಲಾಗುತ್ತದೆ.
ಈ ಉತ್ಸವದಲ್ಲಿ ಒಂದು ಅತ್ಯಂತ ರೋಮಾಂಚಕಾರಿ ಘಟ್ಟವಿದೆ. ತಾಲ್ಲೂಕಿನ ತಹಸೀಲ್ದಾರ್ ಮತ್ತು ದಂಡಾಧಿಕಾರಿಗಳು ಸೇರಿರುವ ಸಾವಿರಾರು ಜನರ ಸಮಕ್ಷಮದಲ್ಲಿ, ದುಷ್ಟಶಕ್ತಿ ಸಂಹಾರದ ಸಂಕೇತವಾಗಿ ಬಾಳೆಯ ಕಂದನ್ನು ಕತ್ತರಿಸುವ ಮೂಲಕ ಬನ್ನಿ ಮುಡಿಯುವ ಶಾಸ್ತ್ರವನ್ನು ನೆರವೇರಿಸುತ್ತಾರೆ. ಆದರೆ, ಇಲ್ಲಿ ಗಮನಸೆಳೆಯುವ ರೋಚಕ ಸಂಗತಿಯೆಂದರೆ ಆ ಬಾಳೆಯ ಕಂದನ್ನು ಕತ್ತರಿಸಲು ಬಳಸುವ ಆಯುಧ. ಅದು ಸಾಮಾನ್ಯವಾದ ಕತ್ತಿಯಲ್ಲ; ಬದಲಾಗಿ, ಎರಡು ಶತಮಾನಗಳಿಗೂ ಹಿಂದೆ ಶಿಕಾರಿಪುರದ ಹುಚ್ಚರಾಯಸ್ವಾಮಿಗೆ ಪರಮ ಭಕ್ತಿಯಿಂದ ಅರ್ಪಿಸಲಾಗಿದ್ದ ಒಂದು ಐತಿಹಾಸಿಕ ಖಡ್ಗ!
ನೂರಾರು ವರ್ಷಗಳ ಇತಿಹಾಸವನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿದ್ದ ಉಕ್ಕಿನ ಖಡ್ಗವದು. ಹಾಗಾದರೆ ಈ ಖಡ್ಗವನ್ನು ನೀಡಿದ್ದು ಯಾರು? ಖಡ್ಗದ ಹಿನ್ನೆಲೆ ಏನು? ಎನ್ನುವ ಪ್ರಶ್ನೆಗೆ ಸಿಗುವ ಉತ್ತರವೇ ಕರುನಾಡಿನ ಹೆಮ್ಮೆಯ ಪುತ್ರ, ಬ್ರಿಟಿಷರ ಪಾಲಿನ ಸಿಂಹಸ್ವಪ್ನ ‘ಧೊಂಡಿಯ ವಾಘ್’.
ಯಾರು ಈ ಧೊಂಡಿಯ ವಾಘ್?
ನಮ್ಮ ನಾಡಿನ ಇತಿಹಾಸದ ಪುಟಗಳಲ್ಲಿ ಎಷ್ಟೋ ಅಮೂಲ್ಯ ರತ್ನಗಳು ಎಲೆಮರೆಯ ಕಾಯಿಯಂತೆ ಉಳಿದುಬಿಟ್ಟಿವೆ. ಧೊಂಡಿಯ ಕೂಡ ಅಂಥವರಲ್ಲೇ ಒಬ್ಬ. ದಾವಣಗೆರೆ ಜಿಲ್ಲೆಯ ಚೆನ್ನಗಿರಿಯಲ್ಲಿ ಜನಿಸಿದ ಈತ, ಬಾಲ್ಯದಿಂದಲೇ ಸ್ವಾಭಿಮಾನಿ. ಆತನ ಶೌರ್ಯ, ಚುರುಕುತನ, ಮತ್ತು ಅಪ್ರತಿಮ ಯುದ್ಧಕೌಶಲವನ್ನು ಕಂಡು ಅಂದಿನ ಜನಸಾಮಾನ್ಯರೇ ಪ್ರೀತಿಯಿಂದ ಆತನಿಗೆ ‘ವಾಫ್’ ಅಥವಾ ‘ವಾಘ್’ (ಅಂದರೆ ಹುಲಿ) ಎಂಬ ಬಿರುದನ್ನು ನೀಡಿದ್ದರು. ಆತನ ಬದುಕಿನ ಪ್ರತಿಯೊಂದು ಹೆಜ್ಜೆಯೂ ಒಂದು ರೋಚಕ ಸಾಹಸಗಾಥೆ.
ಮತಾಂತರದ ಬೆದರಿಕೆ ಮತ್ತು ಶ್ರೀರಂಗಪಟ್ಟಣದ ಕತ್ತಲಕೋಣೆ
ಹದಿನೆಂಟನೇ ಶತಮಾನದ ಅಂತ್ಯದ ಸಮಯ. ಕರ್ನಾಟಕದ ರಾಜಕೀಯ ಪರಿಸ್ಥಿತಿ ತೀವ್ರ ಪಲ್ಲಟಗಳನ್ನು ಕಾಣುತ್ತಿತ್ತು. ಈ ಸಮಯದಲ್ಲಿ ಧೊಂಡಿಯ, ಮೈಸೂರು ಹುಲಿ ಟಿಪ್ಪು ಸುಲ್ತಾನನ ಸೇನೆಗೆ ಸೆರೆಸಿಕ್ಕಿದ್ದ. ಧೊಂಡಿಯನಂತಹ ವೀರನನ್ನು ತನ್ನ ಸೈನ್ಯದಲ್ಲಿರಿಸಿಕೊಳ್ಳಲು ಟಿಪ್ಪು ಒಡ್ಡಿದ ಷರತ್ತು ‘ಮತಾಂತರ’. ಆದರೆ, ತನ್ನ ಮಣ್ಣು ಮತ್ತು ಧರ್ಮದ ಬಗ್ಗೆ ಅತೀವ ಸ್ವಾಭಿಮಾನ ಹೊಂದಿದ್ದ ದೊಂಡಿಯ, ಪ್ರಾಣ ಹೋದರೂ ಸರಿ ಮತಾಂತರವಾಗುವುದಿಲ್ಲ ಎಂದು ಆ ಷರತ್ತನ್ನು ದಿಟ್ಟತನದಿಂದ ಧಿಕ್ಕರಿಸಿದ.
ಇದರ ಪರಿಣಾಮ ಅತ್ಯಂತ ಭೀಕರವಾಗಿತ್ತು. ಧೊಂಡಿಯನನ್ನು ಶ್ರೀರಂಗಪಟ್ಟಣದ ರಹಸ್ಯ ಸೆರೆಮನೆಯ ಕತ್ತಲಕೋಣೆಗೆ ತಳ್ಳಲಾಯಿತು. ಬರೋಬ್ಬರಿ ಐದು ವರ್ಷಗಳ ಕಾಲ ಆತ ಅನುಭವಿಸಿದ ಚಿತ್ರಹಿಂಸೆ ಅಷ್ಟಿಷ್ಟಲ್ಲ. ಆದರೂ ಆತನ ಮನಸ್ಥೈರ್ಯ ಕುಗ್ಗಲಿಲ್ಲ. ತನ್ನ ಗುರಿಯ ಬಗ್ಗೆ ಆತನಿಗಿದ್ದ ನಂಬಿಕೆ ಕಿಂಚಿತ್ತೂ ಕಮ್ಮಿಯಾಗಲಿಲ್ಲ. 1799ರಲ್ಲಿ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಮರಣಹೊಂದಿದಾಗ, ಶ್ರೀರಂಗಪಟ್ಟಣದಲ್ಲಿ ಉಂಟಾದ ಗೊಂದಲದ ಲಾಭ ಪಡೆದು ಧೊಂಡಿಯ ಸೆರೆಮನೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ.
ಬ್ರಿಟಿಷರ ವಿರುದ್ಧ ರಣಕಹಳೆ
ಸೆರೆಮನೆಯಿಂದ ಹೊರಬಂದ ಧೊಂಡಿಯ ಸುಮ್ಮನೆ ಕೂರಲಿಲ್ಲ. ತನ್ನ ಸ್ವಂತ ಊರಿಗೆ ಹೋಗಿ ನೆಮ್ಮದಿಯಾಗಿ ಬದುಕುವ ಅವಕಾಶ ಆತನಿಗಿತ್ತು. ಆದರೆ, ಆತ ಆರಿಸಿಕೊಂಡದ್ದು ಕಷ್ಟದ ಹಾದಿಯನ್ನು. ವ್ಯಾಪಾರದ ನೆಪದಲ್ಲಿ ಭಾರತಕ್ಕೆ ಕಾಲಿಟ್ಟಿದ್ದ ಬ್ರಿಟಿಷರು, ಫ್ರೆಂಚರು ತಮ್ಮ ಕುಟಿಲ ನೀತಿಗಳಿಂದ ಒಂದೊಂದೇ ರಾಜ್ಯಗಳನ್ನು ನುಂಗುತ್ತಿದ್ದರು. ದೇಶೀಯ ರಾಜರುಗಳ ನಡುವೆ ಒಡಕು ಮೂಡಿಸಿ, ಅಣ್ಣ-ತಮ್ಮಂದಿರಂತೆ ಇರಬೇಕಾದವರ ನಡುವೆ ಕಂದಕ ನಿರ್ಮಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರು. ಈ ಅಪಾಯವನ್ನು ಬಹುತೇಕ ದೇಶೀಯ ರಾಜರುಗಳು ಅರ್ಥಮಾಡಿಕೊಳ್ಳುವಷ್ಟರಲ್ಲಿ ಕಾಲ ಮಿಂಚಿಹೋಗಿತ್ತು.
ಆದರೆ, ಧೊಂಡಿಯನಂತಹ ಸಾಮಾನ್ಯ ಹಿನ್ನೆಲೆಯಿಂದ ಬಂದ ವ್ಯಕ್ತಿಗೆ ಬ್ರಿಟಿಷರ ಆಂತರ್ಯ ಸ್ಪಷ್ಟವಾಗಿ ಅರ್ಥವಾಗಿತ್ತು. ಆತ ಬ್ರಿಟಿಷರ ವಿರುದ್ಧ ದಂಗೆಯೆದ್ದ. ಪಾಳೆಯಗಾರರನ್ನು, ದೇಶೀಯ ರಾಜರುಗಳನ್ನು ಒಗ್ಗೂಡಿಸಿ ಎಚ್ಚರಿಸುವ ಪ್ರಯತ್ನ ಮಾಡಿದ. ತನ್ನದೇ ಆದ ಒಂದು ಬೃಹತ್ ಸೈನ್ಯವನ್ನು ಕಟ್ಟಿದ. ಬ್ರಿಟಿಷರ ವಿರುದ್ಧ ಆತ ನಡೆಸಿದ ಗೆರಿಲ್ಲಾ ಮಾದರಿಯ ದಾಳಿಗಳು ಎಷ್ಟರಮಟ್ಟಿಗೆ ಇತ್ತೆಂದರೆ, ಬ್ರಿಟಿಷ್ ಅಧಿಕಾರಿಗಳು ಎಷ್ಟೋ ತಿಂಗಳುಗಳ ಕಾಲ ರಾತ್ರಿ ನಿದ್ದೆಯಿಲ್ಲದೆ ಕಳೆದಿದ್ದರು.
ಇದನ್ನೂ ಓದಿ: ನಾವು ಮರೆತ, ಜಗತ್ತು ಕೊಂಡಾಡಿದ ಭಾರತದ ಕಥೆ: ‘ನಮ್ಮೆಲ್ಲರ ತಾಯಿ ಭಾರತ’ ಕೃತಿಯ ಒಳನೋಟ
ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಐದು ದಶಕಗಳ ಹಿಂದಿನ ಹೋರಾಟ
ನಮ್ಮ ಇತಿಹಾಸದ ಪಠ್ಯಪುಸ್ತಕಗಳಲ್ಲಿ 1857ರ ಸಿಪಾಯಿ ದಂಗೆಯನ್ನು ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಓದಿದ್ದೇವೆ. ಆದರೆ, ಅದಕ್ಕೂ ಸುಮಾರು ಐದಾರು ದಶಕಗಳ ಹಿಂದೆಯೇ ನಮ್ಮ ಕರುನಾಡಿನ ಈ ವೀರ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವನ್ನು ಪ್ರಾರಂಭಿಸಿದ್ದ ಎಂಬುದು ನಮಗೆ ಹೆಮ್ಮೆಯ ಸಂಗತಿಯಾಗಬೇಕು.
ಬ್ರಿಟಿಷರನ್ನು ಈ ದೇಶದಿಂದ ಓಡಿಸಬೇಕಾದರೆ ಕೇವಲ ಒಬ್ಬನಿಂದ ಸಾಧ್ಯವಿಲ್ಲ, ಎಲ್ಲರೂ ಒಂದಾಗಬೇಕು ಎಂಬುದು ಧೊಂಡಿಯನ ಕನಸಾಗಿತ್ತು. ಇದಕ್ಕಾಗಿ ಆತ ಮರಾಠರು ಮತ್ತು ನಿಜಾಮನ ಸಹಾಯವನ್ನೂ ಕೋರಿದ್ದ. ಆದರೆ ದುರಾದೃಷ್ಟವಶಾತ್, ಆಗಲೇ ಬ್ರಿಟಿಷರ ಕುಟಿಲತೆಗೆ, ಒಡೆದು ಆಳುವ ನೀತಿಗೆ ಬಲಿಯಾಗಿದ್ದ ಮರಾಠರು ಮತ್ತು ನಿಜಾಮರು ದೊಂಡಿಯನ ಬೆಂಬಲಕ್ಕೆ ನಿಲ್ಲಲಿಲ್ಲ. ಟಿಪ್ಪು ಆಗಲೇ ಹತನಾಗಿದ್ದರಿಂದ ಮೈಸೂರು ಪ್ರಾಂತ್ಯ ಕೂಡ ಬ್ರಿಟಿಷರ ಕಪಿಮುಷ್ಠಿಯಲ್ಲಿತ್ತು. ಅಂತಿಮವಾಗಿ, ದೊಂಡಿಯ ತಾನೊಬ್ಬನೇ ಒಂಟಿ ಸಲಗದಂತೆ ಬ್ರಿಟಿಷರ ವಿರುದ್ಧ ಘೋರ ಸಂಘರ್ಷಕ್ಕೆ ಇಳಿದ.
ಆತನ ಸಾಮರ್ಥ್ಯ, ಯುದ್ಧತಂತ್ರಗಳು ಎಷ್ಟೊಂದು ಪ್ರಬಲವಾಗಿದ್ದವು ಎಂದರೆ, ಕೇವಲ ಬ್ರಿಟಿಷರ ಸೇನೆ ಆತನನ್ನು ಸದೆಬಡಿಯಲು ಸಾಧ್ಯವಾಗಲಿಲ್ಲ. ಧೊಂಡಿಯನನ್ನು ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದ ಬ್ರಿಟಿಷರು, ಮರಾಠರು ಮತ್ತು ನಿಜಾಮನ ಬೃಹತ್ ಸೇನೆಗಳ ಜೊತೆ ಕೈಜೋಡಿಸಿ ಜಂಟಿ ಕಾರ್ಯಾಚರಣೆ ಆರಂಭಿಸಿದರು. ಮೂರು ದೊಡ್ಡ ಬೃಹತ್ ಸೇನೆಗಳು ಒಬ್ಬಂಟಿ ವೀರನ ವಿರುದ್ಧ ಸತತ ಒಂದೂವರೆ ವರ್ಷಗಳ ಕಾಲ ಕಾರ್ಯಾಚರಣೆ ನಡೆಸಿದವು! ಕೊನೆಗೂ ಈ ಸುದೀರ್ಘ, ಪ್ರಯಾಸಕರ ಹೋರಾಟದಲ್ಲಿ ಧೊಂಡಿಯ ವೀರೋಚಿತವಾಗಿ ಮರಣಹೊಂದಿ, ಹುತಾತ್ಮನಾದ. ಬ್ರಿಟಿಷರು ಗೆದ್ದರಾದರೂ, ಧೊಂಡಿಯನನ್ನು ಮಣಿಸುವುದು ಎಷ್ಟು ಕಷ್ಟದಾಯಕವಾಗಿತ್ತು ಎಂಬುದನ್ನು ಸ್ವತಃ ಬ್ರಿಟಿಷ್ ಇತಿಹಾಸಕಾರರೇ ತಮ್ಮ ದಾಖಲೆಗಳಲ್ಲಿ ಬರೆದುಕೊಂಡಿದ್ದಾರೆ. ಅಂದು ಸಕಾಲದಲ್ಲಿ ಅವನಿಗೆ ನಿರೀಕ್ಷಿತ ಸಹಾಯ ಒದಗಿಬಂದಿದ್ದಲ್ಲಿ ಆತ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಖಂಡಿತ ಬದುಕಿ ಉಳಿಯುತ್ತಿದ್ದ ಮತ್ತು ಅವರ ಸಾಮ್ರಾಜ್ಯದ ಬೇರುಗಳನ್ನೇ ಅಲುಗಾಡಿಸುತ್ತಿದ್ದ.
ಹದಿನೆಂಟನೇ ಶತಮಾನದ ಕರ್ನಾಟಕದ ರಾಜಕೀಯ ಪರಿಸ್ಥಿತಿ, ಆಗಿನ ಕಾಲಘಟ್ಟದ ಕುಟಿಲತೆಗಳ ನಡುವೆಯೂ ಸ್ವಾಭಿಮಾನ, ಶೌರ್ಯ ಮತ್ತು ಸಂಘಟನಾ ಚತುರತೆಯಿಂದ ಮೆರೆದ ದೊಂಡಿಯ ವಾಘ್ನಂತಹ ನಾಯಕನನ್ನು ನಾವು ಇಂದು ಸ್ಮರಿಸಲೇಬೇಕಿದೆ. ಇದು ಕೇವಲ ಒಬ್ಬ ವೀರನ ಕಥೆಯಲ್ಲ, ಇದು ನಮ್ಮ ನೆಲದ, ನಮ್ಮ ಕರುನಾಡಿನ ಸ್ವಾಭಿಮಾನದ ಕಥೆ. ಇಂತಹ ನೈಜ ವೀರರ ರೋಚಕ ಚರಿತ್ರೆ ನಮ್ಮ ಇಂದಿನ ಯುವಜನತೆಗೆ ತಲುಪಬೇಕು, ಅವರಲ್ಲಿ ಸ್ಫೂರ್ತಿಯ ಕಿಡಿಯನ್ನು ಹೊತ್ತಿಸಬೇಕು. ಧೊಂಡಿಯನ ಹೋರಾಟದ ಬದುಕಿನ ಚಿತ್ರಣವನ್ನು ನೀವೂ ತಿಳಿಯಲು ಬಯಸಿದರೆ ಕರುನಾಡ ಹುಲಿ ಧೊಂಡಿಯ ಪುಸ್ತಕ ಓದಿ. ಈ ಪುಸ್ತಕವನ್ನು ನೀವು sahityabooks.com ನಲ್ಲಿ ಖರೀದಿಸಬಹುದು, ಈ ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಗೆ 95911 55622 ಈ ಸಂಖ್ಯೆಯನ್ನು ಸಂಪರ್ಕಿಸಿ.
ಕರುನಾಡ ಹುಲಿ ಧೋಂಡಿಯ | Karunada Huli Dhondiya | ಕ.ವೆಂ. ನಾಗರಾಜ
ಪುಸ್ತಕದ ಹೆಸರು: ಕರುನಾಡ ಹುಲಿ ಧೊಂಡಿಯ
ಲೇಖಕರು: ಕ. ವೆಂ. ನಾಗರಾಜ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ (1857) ದಶಕಗಳ ಹಿಂದೆಯೇ ರಣಕಹಳೆ ಮೊಳಗಿಸಿದ ಕರುನಾಡಿನ ಅಪ್ರತಿಮ ವೀರ ‘ದೊಂಡಿಯ ವಾಫ್’ ಜೀವನಚರಿತ್ರೆ. ಟಿಪ್ಪು ಸುಲ್ತಾನನ ಸೆರೆಮನೆಯಿಂದ ತಪ್ಪಿಸಿಕೊಂಡು, ತನ್ನ ಶೂರತನ ಮತ್ತು ಚುರುಕಿನ ವ್ಯಕ್ತಿತ್ವದಿಂದಲೇ ಜನಸಾಮಾನ್ಯರಿಂದ ‘ವಾಫ್’ (ಹುಲಿ) ಎನಿಸಿಕೊಂಡ ಧೀರನ ರೋಮಾಂಚಕ ಇತಿಹಾಸವಿದು.



