ವಿದ್ಯಾಲಂಕಾರ
₹495.00₹550.00 (-10%)
ಪ್ರೊ║ ಮಲ್ಲೇಪುರಂ ಜಿ. ವೆಂಕಟೇಶ
ಶತಾವಧಾನಿ ಡಾ║ ಆರ್ ಗಣೇಶ್
ಬಿ. ಎನ್. ಶಶಿಕಿರಣ
Description
ಪ್ರೊ║ ಸಾ. ಕೃ. ರಾಮಚಂದ್ರರಾಯರ ಸಂಸ್ಮರಣಗ್ರಂಥ
ಸಾಲಿಗ್ರಾಮ ಕೃಷ್ಣ ರಾಮಚಂದ್ರರಾಯರು (೧೯೨೫-೨೦೦೬) ತಮ್ಮ ಜೀವನಾವಧಿಯಲ್ಲಿಯೇ ದಂತಕಥೆಯಾದವರು. ಇವರು ಕಲೆ ಮತ್ತು ಶಾಸ್ತ್ರಗಳೆಂಬ ಎರಡು ವಿಭಾಗ ಗಳಲ್ಲಿ ಅಭಿಜಾತ ಭಾರತೀಯ ಸಂಸ್ಕೃತಿ ಸಾಧಿಸಿದ ಸಾರಸ್ವತ ಸಂಪತ್ತಿಯನ್ನು ತತ್ತ್ವ ಮತ್ತು ಪ್ರಯೋಗಗಳ ಹಾದಿಯಲ್ಲಿ ತಮ್ಮದನ್ನಾಗಿಸಿಕೊಂಡರು. ಸ್ವಪ್ರಯತ್ನ ಮತ್ತು ಗಂಭೀರ ಅಧ್ಯಯನಗಳ ಮೂಲಕ ತಮ್ಮ ಬಗೆಬಗೆಯ ಆಸಕ್ತಿಗಳನ್ನು ಅಧಿಕಾರಕ್ಷೇತ್ರ ಗಳನ್ನಾಗಿ ಮಾಡಿಕೊಂಡು ಏಕವ್ಯಕ್ತಿವಿಶ್ವವಿದ್ಯಾಲಯವೇ ಆದರು. ಕಲಿಕೆ, ಬರೆವಣಿಗೆ ಮತ್ತು ಅವುಗಳ ಪ್ರಸಾರಗಳಿಗೆ ಹೆಚ್ಚಿನ ಸೌಲಭ್ಯಗಳಿಲ್ಲದ ಕಾಲದಲ್ಲಿ ತಾವು ಕಲಿತದ್ದನ್ನೆಲ್ಲ ಬರೆದು, ಬರೆದದ್ದನ್ನೆಲ್ಲ ಜನತೆಗೆ ಮುಟ್ಟಿಸಿದ ಅಪ್ರತಿಮ ಕ್ರಿಯಾಶೀಲರು. ಎಂಥ ಕಠಿನ ವಿಷಯವನ್ನೂ ಸರಸ-ಸುಬೋಧ ಶೈಲಿಯಲ್ಲಿ ಜನಸಾಮಾನ್ಯರಿಗೆ ಎಟುಕಿಸುವಲ್ಲಿ ಯಶಸ್ವಿಯಾದ ಭಾಷಾಶಿಲ್ಪಿ ಇವರು. ಯಾವುದೇ ಸಾಂಸ್ಥಿಕ ಬಲವನ್ನು ನಚ್ಚಿಕೊಳ್ಳದೆ ತಾವಿದ್ದಲ್ಲಿಗೆ ಜಿಜ್ಞಾಸುಗಳನ್ನು ಆಕರ್ಷಿಸಿ, ಅವರಿಗೆ ಬೇಕಾದುದನ್ನು ಧಾರಾಳವಾಗಿ ಹಂಚಿಕೊಟ್ಟ ಜ್ಞಾನೋಪಾಸಕರು ರಾಮಚಂದ್ರರಾಯರು.
ಇಂಥ ಮಹನೀಯರ ಜನ್ಮಶತಮಾನೋತ್ಸವದ ಹೊತ್ತಿನಲ್ಲಿ ಅವರ ನೆನಪನ್ನು ಅರ್ಥಪೂರ್ಣವಾಗಿ ಮರುಕಳಿಸಿಕೊಳ್ಳಲು ರಾಷ್ಟೋತ್ಥಾನ ಸಾಹಿತ್ಯ ಸಂಕಲ್ಪಿಸಿದ ಸಂಸ್ಕರಣಗ್ರಂಥ ‘ವಿದ್ಯಾಲಂಕಾರ’. ಇಲ್ಲಿ ರಾಮಚಂದ್ರರಾಯರನ್ನು ನಿಕಟವಾಗಿ ಬಲ್ಲ ಹಲವರು ಕಟ್ಟಿಕೊಟ್ಟ ಪ್ರತಿಚಿತ್ರಗಳ ಮಾಲೆಯಿದೆ, ಅವರ ಬಹುಮುಖ ಸಾರಸ್ವತ ಸೇವೆಯ ಸಾರವತ್ತಾದ ಪರಿಚಯವಿದೆ, ಈವರೆಗೆ ಹೆಚ್ಚಿನವರು ಗಮನಿಸಿರದ ಆಯಾಮ ಗಳತ್ತ ಹೊಸ ಬೆಳಕು ಹಾಯಿಸುವ ಪ್ರಕ್ರಿಯೆಯೂ ಸಾಗಿದೆ. ಈ ಕಾಯಕವನ್ನು ನಮ್ಮ ನಾಡಿನ ಪರಿಣತ ವಿದ್ವಾಂಸರು ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ. ರಾಯರ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ರಮಾದೇವಿಯವರ ಅಪೂರ್ವ ಸಂದರ್ಶನಗಳು ಈ ಗ್ರಂಥದ ಮೌಲ್ಯವನ್ನು ಹೆಚ್ಚಿಸಿವೆ.
ಹೀಗೆ ರಾಮಚಂದ್ರರಾಯರ ಸಾರಸ್ವತ ಕೃಷಿಯ ಒಟ್ಟಂದದ ಚಿತ್ರಣವನ್ನು ‘ವಿದ್ಯಾಲಂಕಾರ’ದಲ್ಲಿ ಕಾಣಬಹುದು. ಈ ನಿಟ್ಟಿನಲ್ಲಿ ಇದೊಂದು ಅನನ್ಯ ಕೃತಿ. ಮುಂದೆ ಸಾಗಬೇಕಿರುವ ಹೆಚ್ಚಿನ ಅಧ್ಯಯನಗಳಿಗೂ ಇದೊಂದು ಕೈದೀವಿಗೆ. ರಾಯರ ಬದುಕು ಮತ್ತು ಬರೆಹಗಳಲ್ಲಿ ಆಸ್ಥೆಯುಳ್ಳವರಿಗೆಲ್ಲ ‘ವಿದ್ಯಾಲಂಕಾರ’ ಉಪಾದೇಯವಾಗಿದೆ.






