Description
ಬೇಂದ್ರೆಯವರ ಸಾಹಿತ್ಯದ ಮೇಲೆ ಅಲ್ಲಿ ಇಲ್ಲಿ ಕೆಲವು ಲೇಖನಗಳು, ಅವರ ಕಾವ್ಯದ ಮೇಲೆ ಒಂದೆರಡು ಗ್ರಂಥಗಳು ಬಂದಿದ್ದರೂ ಸಮಗ್ರವಾಗಿ ಅವರ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ, ಅವರ ಸಾಹಿತ್ಯ ಮೇಲೆ ಬಂದಿರುವ ಎಲ್ಲ ವಿಮರ್ಶೆಗಳನ್ನೂ ಗಮನಿಸಿ, ತಮ್ಮ ಕೃತಿಗಳ ಮೇಲೆ ಬೇಂದ್ರೆಯವರೆ ಹೇಳಿರುವ ಮಾತುಗಳನ್ನೆಲ್ಲ ಸಂಗ್ರಹಿಸಿ, ಸಮೀಕ್ಷೆ ನಡೆಸಿ, ಬೇಂದ್ರೆಯವರು ಯಾವ ಯಾವ ಕೃತಿಗಳಿಂದ, ಸಾಹಿತಿಗಳಿಂದ ಪ್ರಭಾವಿತರಾದರು. ಆ ಪ್ರಭಾವಗಳನ್ನೆಲ್ಲ ಮೀರಿ ನಿಂತು ಅವರ ಕೃತಿಗಳು ಹೇಗೆ ಸ್ವತಂತ್ರ ಕೃತಿಗಳಾಗಿ ಕನ್ನಡ ಕಾವ್ಯ ಸಂಪ್ರದಾಯದಲ್ಲೇ ಅನನ್ಯವಾಗಿವೆ ಎಂಬುದನ್ನು ಇಲ್ಲಿ ಸವಿಸ್ತಾರವಾಗಿ ಚಿತ್ರಿಸಿ ಶ್ರೀ ಆಮೂರರು ಬೇಂದ್ರೆಯವರ ಸಾಹಿತ್ಯದ ಆಳವಾದ ಅಭ್ಯಾಸಕ್ಕೆ ತುಂಬ ಸಹಕಾರಿಯಾಗುವಂತೆ ರಚಿಸಿದ ಕೃತಿ ಇಲ್ಲಿದೆ. ಕನ್ನಡ ರಸಿಕರೆಲ್ಲರೂ ಗಮನಿಸಲೇಬೆಕಾದ ಗ್ರಂಥ ಇದು ಎಂದೂ ಧಾರಾಳವಾಗಿ ಹೇಳಬಹುದು.
ಹಾಗಂತ ಇಲ್ಲಿ ಹೇಳಿದ ಎಲ್ಲ ಸಂಗತಿಗಳನ್ನೂ ಎಲ್ಲರೂ ಒಪ್ಪುತ್ತಾರೆಂದಾಗಲೀ, ಒಪ್ಪಲೇಬೇಕೆಂದಾಗಲೀ ಅಲ್ಲ. ಮುಂದೆ ಚರ್ಚಿಸಿ ಒಂದು ಸಿದ್ಧಾಂತಕ್ಕೆ ಬರಬಹುದಾದ, ಹಾಗೆ ಬರಲು ತಕ್ಕ ಮೌಲಿಕ ಸಾಮಗ್ರಿ ಇಲ್ಲಿದೆ. ಅಂಥ ಕೆಲಸ ಸಾರೋದ್ಧಾರ ನಡೆಯಲಿ. ಆ ಮೂಲಕ ಈ ಕೃತಿ ಕೃತಿಕಾರ ಇಬ್ಬರೂ ಕೃತಾರ್ಥತೆ ಪಡೆಯಲಿ ಎಂದು ಹಾರಯಿಸಿ ಶುಭಾಶಯಗಳನ್ನು ಇಲ್ಲಿ ಸಲ್ಲಿಸುತ್ತೇನೆ.
-ಗೋಪಾಲಕೃಷ್ಣ ಅಡಿಗ






